Wednesday

>ರಂಗ< ಸ್ಥಳಕ್ಕೆ ಕನ್ನಡ ಚಾನೆಲ್...

ರಂಗನಾಥರು ದಟ್ಸ್ ಕನ್ನಡಕ್ಕೆ ಕೊಟ್ಟ ಸಂದರ್ಶನ ಇದು...



ಕನ್ನಡ ಸುದ್ದಿ ಚಾನಲ್ಲುಗಳ ಸಾಲಿಗೆ ಸದ್ಯದಲ್ಲೇ ಹೊಸ ವಾಹಿನಿಯೊಂದು ಸೇರ್ಪಡೆಯಾಗಲಿದೆ. ಉದ್ದೇಶಿತ ವಾಹಿನಿಯು ಸುವರ್ಣ ಟಿವಿಯಲ್ಲಿ ಸಂಪಾದಕರಾಗಿದ್ದ ಎಚ್ ಆರ್ ರಂಗನಾಥ್ ಅವರ ಮುಂದಾಳತ್ವದಲ್ಲಿ ಜನ್ಮತಾಳಲಿದೆ.

ಇಂದಿನಿಂದ 80 ದಿನಗಳೊಳಗಾಗಿ ತಮ್ಮ ಚಾನಲ್ ಪ್ರಸಾರ ಆರಂಭಿಸಲಿದ್ದು. ಚಾನಲ್ ನಿರ್ಮಾಣ ಚಟುವಟಿಕೆಗಳು ಭರದಿಂದ ಸಾಗಿವೆ ಎಂದು ರಂಗನಾಥ್ ಇದೇ ಮೊದಲಬಾರಿಗೆ ಅಧಿಕೃತವಾಗಿ ಪ್ರಕಟಣೆ ಮಾಡಿದ್ದಾರೆ.

ಕನ್ನಡ ಟಿವಿ ವೀಕ್ಷಕರ ಆಶೋತ್ತರಗಳನ್ನು ಯಥಾವತ್ತಾಗಿ ಬಿಂಬಿಸುವ, ಮೊಟ್ಟ ಮೊದಲ ಜನಪರ ವಾಹಿನಿಯಾಗಿ ತಮ್ಮ ಚಾನಲ್ ರೂಪುಗೊಳ್ಳಲಿದೆ ಎಂದು ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ಇಪ್ಪತ್ನಾಲ್ಕು ಗಂಟೆ ಕನ್ನಡದಲ್ಲಿ ಸುದ್ದಿ ನೀಡುವ ಟಿವಿ9, ಸುವರ್ಣ ನ್ಯೂಸ್, ಜನಶ್ರೀ ಮತ್ತು ಸಮಯ ಚಾನಲ್ಲುಗಳ ಸಾಲಿಗೆ ರಂಗ ಅವರ ಇನ್ನೂ ಹೆಸರಿಡದ ಚಾನಲ್, 5 ನೇ ವಾಹಿನಿಯಾಗಿ ಸೇರ್ಪಡೆಯಾಗುತ್ತದೆ.

ಇಪ್ಪತ್ತು ಸಾವಿರ ಚದರ ಅಡಿ ಜಾಗ ಇರುವ ಚಾನಲ್ ಕಚೇರಿ ಯಶವಂತಪುರದಲ್ಲಿ ತೆರೆಯಲಾಗಿದೆ. ಚಾನಲ್ ಸ್ಥಾಪನೆಗೆ ಅಗತ್ಯವಾಗ ತಾಂತ್ರಿಕ ಉಪಕರಣಗಳು, ಇಂಟೀರಿಯರ್ ಡೆಕೋರೇಷನ್ ಮತ್ತು ಅಗತ್ಯ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ರಂಗಾ ಹೇಳಿದರು.

ನಿಮ್ಮ ಹೊಸ ಸಾಹಸಕ್ಕೆ ಬಂಡವಾಳ ಹಾಕುವವರು ಯಾರು ಎಂಬ ಪ್ರಶ್ನೆಗೆ ಸೀದಾ ನೇರ ಉತ್ತರ ನೀಡಲು ನಿರಾಕರಿಸಿದ ರಂಗ, ಕಪ್ಪುಹಣ ಮತ್ತು ರಾಜಕೀಯ ವ್ಯಕ್ತಿಗಳ ಹಣದಿಂದ ತಮ್ಮ ಚಾನಲ್ ಮುಕ್ತವಾಗಿರುತ್ತದೆ ಎಂದಷ್ಟೇ ಹೇಳಿದರು.

ತಮ್ಮ ಹೊಸ ಸಾಹಸ ಪತ್ರಕರ್ತರ ಪಾಲುದಾರಿಕೆಯಿಂದ ನಡೆಯುವ ಚಾನಲ್ ಆಗಿರುತ್ತದೆ ಎಂದೂ ಅವರು ಒತ್ತಿ ಹೇಳಿದರು. ತಾವು 1 ರು. ಸಂಬಳ ಪಡೆಯುವ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

ತಮ್ಮ ಚಾನಲ್ ಲಾಭ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಉದ್ಯಮ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಷ್ಟು ಆದಾಯ ಮಾಡಿದರಷ್ಟೇ ಸಾಕು ಎಂದ ರಂಗ, ಯಾವುದೇ ರಾಜಕೀಯ, ಉದ್ಯಮದ ಲಾಬಿಗಳಿಗೆ ಮಣಿಯದ ತಮ್ಮ ಸಂಸ್ಥೆ, ಸ್ವಚ್ಛ, ಸೀದಾ, ಸಾದಾ, ಪತ್ರಿಕೋದ್ಯಮದಲ್ಲಿ ಬಲವಾದ ನಂಬಿಕೆ ಇಟ್ಟ ಒಂದು ವಿನೂತನ ಮಾಧ್ಯಮ ಸಂಸ್ಥೆ ಆಗಲಿದೆ ಎಂದರು.

ಚಾನಲ್ ಆರಂಭಿಸುವುದಕ್ಕೆ ಮೂಲ ಬಂಡವಾಳ 10 ಕೋಟಿ ರು. ಬೇಕು. ಪ್ರತೀ ತಿಂಗಳು 1 ಕೋಟಿ ರು. ಪುನರಾವರ್ತಿತ ವೆಚ್ಚದಂತೆ ವರ್ಷಕ್ಕೆ 25 ಕೋಟಿ ರು. ಬಂಡವಾಳ ಅಗತ್ಯ ಎಂದು ನುಡಿದರು.

No comments: