ನಟಿ ರಮ್ಯಾ ಹಾಗು ನಿರ್ಮಾಪಕ ಗಣೇಶ್ ನಡುವಿನ ಜಗಳ ಇಡೀ ಕನ್ನಡ ಸಿನಿಮಾರಂಗವನ್ನೇ ಎರಡು ಭಾಗವಾಗಿ ವಿಂಗಡಿಸಿದೆ. ಒಂದೆಡೆ ಕಲಾವಿದರ ಸಂಘ ಮತ್ತೊಂದೆಡೆ ನಿರ್ಮಾಪಕರ ಸಂಘ ತೊಡೆ ತಟ್ಟಿ ನಿಂತಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ನಿಂತು ಏನೂ ಮಾಡಲಾಗದೆ ಒದ್ದಾಡುತ್ತಿದೆ. ರಮ್ಯಾ ಪರವಾಗಿ ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅಬ್ಬರಿಸುತ್ತಿದ್ದರೆ, ಅತ್ತ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ನಾನೇ ಹೈಕಮಾಂಡ್ ಎಂದು ರೋಧಿಸುತ್ತಿದ್ದಾರೆ.
ಇಷ್ಟು ದೊಡ್ಡ ಸಂಘರ್ಷ ಬೇಕಿತ್ತೆ? ಇದು ಇಷ್ಟು ದಿನಗಳ ಕಾಲ ಬೆಳೆಯಬೇಕಿದ್ದ ವಿವಾದವೇ?
ಒಂದು ಸಿನಿಮಾ ತಯಾರಾಗುತ್ತಿದೆಯೆಂದರೆ ಅದರಲ್ಲಿ ನೂರೆಂಟು ಸಮಸ್ಯೆಗಳು ಇದ್ದೇ ಇರುತ್ತವೆ. ಮನೆಯೊಳಗೆ ಜಗಳ, ಅಲ್ಲಲ್ಲೇ ತೀರ್ಮಾನವಾಗಬೇಕು, ಬಹುತೇಕ ಹೀಗೇ ಆಗುತ್ತದೆ. ಇತ್ತೀಚಿಗೆ ನಟ ಗಣೇಶ್ ಅಭಿನಯಿಸಿದ ಸಿನಿಮಾ ಒಂದರ ಪ್ರಮೋಷನ್ಗೆ ಆತ ಬಂದಿರಲಿಲ್ಲ. ಹೀಗಾಗಿಯೇ ಸಿನಿಮಾ ಸೋತು ಹೋಯಿತು ಎಂದು ಅದರ ನಿರ್ದೇಶಕ, ನಿರ್ಮಾಪಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯೂಸು ಟಿವಿಗಳಲ್ಲಿ ಗಂಟೆಗಟ್ಟಲೆ ಚರ್ಚೆಯೂ ನಡೆದಿತ್ತು. ಆದರೆ ನಿರ್ಮಾಪಕರ ಸಂಘ ಹೀಗೆ ಫೀಲ್ಡಿಗೆ ಇಳಿದಿರಲಿಲ್ಲ. ಹೀಗೆ ನಾಯಕ-ನಾಯಕಿ ಚಿತ್ರದ ಪ್ರಮೋಷನ್ಗೆ ಬರದೇ ಇರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಟಿವಿ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿರುವುದರಿಂದಲೇ ಸಿನಿಮಾ ಪ್ರಮೋಷನ್ ವಿಷಯ ಈಗ ಇಷ್ಟು ಮಹತ್ವದ ಪಾತ್ರ ವಹಿಸುತ್ತಿದೆ.
ದಂಡಂ ದಶಗುಣಂ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ರಮ್ಯಾ ಬರಬೇಕಿತ್ತು, ಬರಲಿಲ್ಲ. ಬರದೇ ಹೋಗಿದ್ದಕ್ಕೆ ಕಾರಣವೂ ಆಕೆಯ ಬಳಿಯಿತ್ತು. ಚಿತ್ರದ ನಿರ್ಮಾಪಕ ಗಣೇಶ್, ನಿರ್ಮಾಪಕರ ಸಂಘದ ಪದಾಧಿಕಾರಿಯೂ ಆಗಿದ್ದರು. ರಮ್ಯಾ ಹಾಗು ಗಣೇಶ್ ಕುಳಿತು ಇಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು.
ಆದರೆ ಯಾಕೆ ಇಷ್ಟು ರಂಪಾಟ ನಡೆಯಿತು. ಯಾಕೆ ಗಣೇಶ್ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡರು? ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್ರನ್ನು ಕೆರಳಿಸಿದ್ದು ಓರ್ವ ಪತ್ರಕರ್ತ. ಅಲ್ರೀ, ನಿಮ್ಮ ಸಿನಿಮಾ ಕಾರ್ಯಕ್ರಮಕ್ಕೇ ಅವಳು ಬರಲಿಲ್ಲ ಅಂದ್ರೆ ಏನ್ರೀ? ಏನು ಮಾಡ್ತಾ ಇದೆ ನಿಮ್ಮ ನಿರ್ಮಾಪಕರ ಸಂಘ. ಇಂಥವರನ್ನು ಹೀಗೇ ಬಿಡ್ತೀರಾ ಎಂದು ಗಣೇಶ್ರನ್ನು ಛೂ ಬಿಟ್ಟಿದ್ದು ಓರ್ವ ಪತ್ರಕರ್ತ.
ಹೌದ್ದಲ್ವಾ? ಒಂದು ಕೈ ನೋಡೇ ಬಿಡೋಣ ಎಂದು ಗಣೇಶ್ ಫೀಲ್ಡಿಗಿಳಿದರು. ಈಗ ರಣರಂಪವಾಗಿ ಹೋಗಿದೆ. ಸಿನಿಮಾ ಪತ್ರಕರ್ತರ ಪೈಕಿ ಕೆಲವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರಲು ಬಯಸುತ್ತಾರೆ. ಅವರು ಹೆಸರಿಗಷ್ಟೆ ಪತ್ರಕರ್ತರು. ಸಿನಿಮಾ ನಟ-ನಟಿಯರಿಗೆ ಛಾನ್ಸು ಕೊಡಿಸುವುದರಿಂದ ಹಿಡಿದು ಸಿನಿಮಾ ಪ್ರೊಡಕ್ಷನ್ನ ಎಲ್ಲ ಕೆಲಸಗಳಲ್ಲೂ ಅವರು ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ತೂರಿಸುತ್ತಾರೆ.
ನಿಮಗೆ ಆಶ್ಚರ್ಯ ಅನಿಸಬಹುದು, ಸಿನಿಮಾಗಳಿಗೆ ಫೈನಾನ್ಸು ಕೊಡಿಸುವ ದಂಧೆಯನ್ನೂ ಕೆಲವರು ಮಾಡುತ್ತಾರೆ. ರಾಜಿ ಪಂಚಾಯ್ತಿಗಳನ್ನೂ ನಡೆಸುತ್ತಾರೆ. ಒಂದರ್ಥದಲ್ಲಿ ಸಿನಿಮಾ ಮಂದಿಗೂ, ಸಿನಿಮಾ ಪತ್ರಕರ್ತರಿಗೂ ನಡುವಿನ ಅಂತರದ ಗೆರೆಯೇ ಅಳಿಸಿ ಹೋದಂತಾಗಿದೆ.
ಕೆಲವು ಪತ್ರಕರ್ತರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಛಾನ್ಸು ಸಿಗಲಿಲ್ಲವೆಂದರೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ, ನಿರ್ದೇಶಕರು ಹಣ್ಣುಗಾಯಿ-ನೀರುಗಾಯಿಯಾಗುತ್ತಾರೆ. ಸಿನಿಮಾ ಮಂದಿಯ ನಡುವೆ ಜಗಳ ತಂದಿಡುವುದು, ಚಾಡಿ ಹೇಳುವುದು, ಫಿಟ್ಟಿಂಗ್ ಇಡುವುದು ಇದೆಲ್ಲವೂ ಕೆಲವು ಸಿನಿಮಾ ಪತ್ರಕರ್ತರಿಗೆ ಮಾಮೂಲಿ ಖಯಾಲಿ. ಕೆಲವರ ವರ್ತನೆ ಅತಿಯಾದಾಗ ದೊಡ್ಡ ಸಿನಿಮಾ ಸಂಸ್ಥೆಗಳ ಧಣಿಗಳು ಪತ್ರಿಕಾ ಸಂಸ್ಥೆಗಳ ಮಾಲೀಕರ ಜತೆ ಮಾತನಾಡಿ ಪತ್ರಕರ್ತರ ಸಿನಿಮಾ ಬೀಟ್ ಕಳೆದ ಅನಾರೋಗ್ಯಕರ ಬೆಳವಣಿಗೆಗಳೂ ನಡೆದಿವೆ.
ಒಮ್ಮೆ ಜನಪ್ರಿಯ ಚಿತ್ರನಟಿಯೊಬ್ಬಾಕೆ ಪತ್ರಕರ್ತರೊಬ್ಬರೊಂದಿಗೆ ಆಡಿದ ಖಾಸಗಿ ಮಾತುಗಳೆಲ್ಲ ಆಕೆ ಅಭಿನಯಿಸುತ್ತಿದ್ದ ಚಿತ್ರದ ನಿರ್ದೇಶಕನಿಗೆ ಗೊತ್ತಾಗಿ ಹೋಯಿತು. ಇಬ್ಬರೂ ಜಗಳವಾಡಿ ಹಾವು ಮುಂಗುಸಿ ಆಗಿ ಹೋದರು. ಯಾಕೆ ಹೀಗಾಯಿತು ಎಂದರೆ ಪತ್ರಕರ್ತ ಮಾತನಾಡುವಾಗ ತನ್ನ ಮೊಬೈಲ್ನ ಲೌಡ್ ಸ್ಪೀಕರ್ ಆನ್ ಮಾಡಿ ಇತರ ಪತ್ರಕರ್ತ ಮಿತ್ರರಿಗೂ ಕೇಳಿಸಿದ್ದ. ಅವರಲ್ಲಿ ಒಬ್ಬ ಅದನ್ನು ನಿರ್ದೇಶಕನಿಗೆ ಯಥಾವತ್ತಾಗಿ ವರದಿ ಮಾಡಿದ್ದ.
ಹಿಂದೆಲ್ಲ ಮುಹೂರ್ತ, ಆಡಿಯೋ ರಿಲೀಸು, ಕುಂಬಳಕಾಯಿ, ಸಿನಿಮಾ ರಿಲೀಸು, ನೂರು ದಿನದ ಸಂಭ್ರಮ ಹೀಗೆ ಹಲವು ಸಂದರ್ಭಗಳಲ್ಲಿ ಸಿನಿಮಾದ ನಿರ್ಮಾಪಕರು ಪತ್ರಕರ್ತರಿಗೆ ಪಾರ್ಟಿ ಕೊಡುತ್ತಿದ್ದರು. ಈ ಪಾರ್ಟಿಗಳಲ್ಲಿ ಕೆಲವರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರೆಂದರೆ ಅವರನ್ನು ರಾತ್ರಿ ಸರಿಹೊತ್ತಿನಲ್ಲಿ ಮನೆಗಳಿಗೆ ತಲುಪಿಸುವುದೇ ಕಷ್ಟವಾಗುತ್ತಿತ್ತು. ಎರಡು ಲಾರ್ಜು ಒಳಗೆ ಇಳಿದ ಮೇಲೆ ಎದುರಿಗೆ ಕುಳಿತವನು ಯಾರು ಎತ್ತ ಎಂದು ನೋಡದೆ ಸೊಂಟದ ಕೆಳಗೆ ಮಾತನಾಡುವ ಚಾಳಿ ಹಲವರದ್ದು. ಪುಗಸಟ್ಟೆ ಪಾರ್ಟಿಯಲ್ಲವೇ? ಕೆಲವರು ತಮ್ಮ ಗೆಳೆಯರು, ಅಕ್ಕಪಕ್ಕದ ಮನೆಯವರು, ಬಂಧುಗಳನ್ನೂ ಕರೆತರುತ್ತಿದ್ದರು. ಪಾರ್ಟಿ ಮುಗಿಸಿ ಹೋಗುವಾಗ ಗಿಫ್ಟು ಎಲ್ರೀ ಎಂಬ ಕೂಗಾಟ. ಎಲ್ಲ ನೋಡಿ ಬೇಜಾರಾದ ನಿರ್ಮಾಪಕರ ಸಂಘ, ಇನ್ನು ಮೇಲೆ ಯಾರೂ ಪಾರ್ಟಿ ಕೊಡಬಾರದು ಎಂದು ಫರ್ಮಾನು ಹೊರಡಿಸಿತು. ಪ್ರೊಡಕ್ಷನ್ ಕಾಸ್ಟ್ ಏರಿರುವುದರಿಂದ ಪಾರ್ಟಿ ಕೊಡಿಸುವುದಿಲ್ಲ ಎಂದು ಅದು ಸಮಜಾಯಿಷಿ ನೀಡಿತು. ಇಂಥ ಅವಮಾನ ಬೇಕಿತ್ತೆ?
ಹಾಗಂತ ಎಲ್ಲ ಸಿನಿಮಾ ಪತ್ರಕರ್ತರೂ ಹಾಗಲ್ಲ. ಅಲ್ಲೂ ಬೇಕಾದಷ್ಟು ಮಂದಿ ಮಾನವಂತರು ಇದ್ದಾರೆ. ಆದರೆ ಎಲ್ಲರ ಹೆಸರು ಕೆಡಿಸಲು ನಾಲ್ಕೈದು ಮಂದಿ ಸಾಕಲ್ಲವೇ?:
ಕೃಪೆ ಸಂಪಾದಕೀಯ